‘ಬಾಳಿಗೊಂದು ನಂಬಿಕೆ’ ಬೇಕು ಎನ್ನುತ್ತಾರೆ. ಅದೊಂದು ಊರುಗೋಲು. ಬದುಕಿನ ಸಮುದ್ರದಲ್ಲಿ ಈಜಾಡಿ ಗೆಲ್ಲಲು, ದಡ ಮುಟ್ಟಲು ಇರುವ ಆಸರೆ. ಪ್ರವಾಹದ ವಿರುದ್ಧ ಈಜುವ ಮಾತು ಬಿಡಿ ಪ್ರವಾಹದ ದಿಕ್ಕಿನಲ್ಲಿ ಈಜಲೂ ಕೈ ಸೋಲುವ ದಿನಮಾನಗಳು ಇವು. ಹೀಗಾಗಿ ದಡ ಸೇರುವ, ಗೆಲ್ಲುವ ಪಯಣದಲ್ಲಿ ಹತಾಷೆ ಆವರಿಸುವುದೇ ಹೆಚ್ಚು. ಹಾಗಾಗಿ ಈ ಜೀವನದ ಈ ಸಂಕಟ ಸಾಗರವನ್ನು ದಾಟಲೆಂದೇ ಜನರಿಗೆ ಬಾಳಿಗೊಂದು ನಂಬಿಕೆ ಬೇಕು. ಕೆಲವರಿಗೆ ಅದು ತಮ್ಮ ಆತ್ಮವಿಶ್ವಾಸದ ರೂಪದಲ್ಲಿದ್ದರೆ, ಇನ್ನು ಕೆಲವರಿಗೆ ಬಳಗದ ರೂಪದಲ್ಲಿ, ಕೆಲವರಿಗೆ ಸಾಂತ್ವನ ಮಾತ್ರ ಸಾಕಿದ್ದರೆ, ಇನ್ನು ಕೆಲವರಿಗೆ ಕೈ ಹಿಡಿದು ನಡೆಸುವ ಬೆಳಕು ಬೇಕು. ಇನ್ನು ಕೆಲವರಿಗೆ ಇವೆಲ್ಲಕ್ಕೂ ‘ದೇವರು’ ಎಂಬ ಹೆಸರು. ದೇವರು ಎನ್ನುವುದೇ ಅವರಿಗೆ ಬೆಳಕು, ಸಾಂತ್ವನ, ಆತ್ಮವಿಶ್ವಾಸ, ಪೊರೆಯುವ ಕೈಗಳು…
ಬದುಕು ಎನ್ನುವುದು ಆರಂಭವಾದ ಅಂದಿನಿಂದ ಇಂದಿನವರೆಗೂ ಸೋಲುವ ಭಯ, ಗೆಲ್ಲುವ ಆಸೆ ಜೊತೆ ಜೊತೆಯಾಗಿಯೇ ಸಾಗಿ ಬಂದಿದೆ. ಅಂತೆಯೇ ‘ಸೋಲಿಸಬೇಡ ಗೆಲಿಸಯ್ಯ…..’ ಎನ್ನುವ ಸೊಲ್ಲು ಸಹಾ ಸಾಗಿ ಬಂದಿದೆ.
ಬೆಳ್ಳಿ ಬೆಟ್ಟದ ಮೇಲೆ ಬಿಳಿ ಕುದುರೆ ಏರೋನೆ
ಉದ್ಧಂಡ ಜಗದೊಡೆಯ ಬಿಳಿಗಿರಿ । ರಂಗಯ್ಯ
ಸೋಲಿಸಬೇಡ ಗೆಲಿಸಯ್ಯ
ಇಂತಹ ಆರ್ತನಾದವೇ ಭಕ್ತಿಯಾಗಿ ಪರಿವರ್ತನೆಗೊಂಡಿದ್ದು, ಭಕ್ತಿಯನ್ನು ತೋರಿಸಲು ಹಲವು ಬಾಗಿಲು. ಪೂಜೆ, ಪುನಸ್ಕಾರ, ಹರಕೆ ಎಲ್ಲವೂ.
ಯಾವಾಗ ಬದುಕು ಸಂಕೀರ್ಣವಾಗುತ್ತಾ, ಏಗಲಾಗದೇ ಹೋಗುವಂತಾಗುತ್ತಾಗುತ್ತಾ ಹೋಯಿತೋ ಭಕ್ತಿಯೂ, ಹರಕೆಯೂ, ಶರಣಾಗತಿಯೂ ಹೆಚ್ಚುತ್ತಾ ಹೋಯಿತು. ಹಣ ದೇಗುಲಗಳ ಒಳಗೆ ಪ್ರವೇಶ ಪಡೆದದ್ದೂ, ದೇವರನ್ನೇ ಬದಿಗೆ ತಳ್ಳಿ ಹಣವೇ ಗದ್ದುಗೆಯಲ್ಲಿ ಕುಳಿತುಕೊಳ್ಳುವಂತಾದದ್ದು, ಹಣ ದೇಗುಲದ ಇಂಚಿಂಚನ್ನು ಆವರಿಸುತ್ತಾ ಹೋಗಿದ್ದು ಇಂತಹ ಹಂತದಲ್ಲಿಯೇ.
ಇಂತಹ ಸಮಯದಲ್ಲಿಯೇ ಪತ್ರಕರ್ತ ರವಿ ಪಾಂಡವಪುರ ಅವರ ‘ಅಯ್ಯೋ ದ್ಯಾವ್ರೇ…’ ಕೃತಿ ಹೊರ ಬಂದಿದೆ. ಒಂದು ದೀನ ಆರ್ತನಾದವನ್ನು ಬಂಡವಾಳ ಮಾಡಿಕೊಂಡು ರಾತ್ರಿ ಕಳೆದು ಹಗಲಾಗುವುದರೊಳಗೆ ಶ್ರೀಮಂತರಾಗಿಬಿಡಬೇಕೆನ್ನುವ ಹಪಾಹಪಿ ಏನು ಮಾಡಬಹುದು ಎನ್ನುವುದಕ್ಕೆ ಈ ಕೃತಿ ಕನ್ನಡಿ ಹಿಡಿದಿದೆ. ಶ್ರೀಮಂತಿಕೆ ತನ್ನ ಜೊತೆಗೆ ಅನೇಕ ವಿಕಾರಗಳನ್ನು ಹೊತ್ತು ತರುತ್ತದೆ. ಹೆಣ್ಣು, ಮಣ್ಣು ಎರಡೂ ಹಣದ ಜೊತೆ ಸೇರಿದಾಗ ಉಂಟಾಗುವ ಪರಿಣಾಮವೇ ಸೂಳ್ವಾಡಿಯ ವಿಷ ಪ್ರಸಾದ ದುರಂತ. ರವಿ ಪಾಂಡವಪುರ ಅವರ ಈ ಕೃತಿಯಲ್ಲಿ ದೇವರು ಹಿನ್ನೆಲೆಗೆ ಸರಿದು, ಜನರ ಬಾಳಿನ ನಂಬಿಕೆಯನ್ನೇ ಬದಿಗೆ ಸರಿಸಿ ಹೇಗೆ ಹೆಣ್ಣು ಹೊನ್ನು ಮಣ್ಣು ಜೊತೆಯಾಗಿ ಬಿಡುತ್ತದೆ. ಹಾಗೂ ಈ ರೀತಿ ಜೊತೆಯಾದಾಗ ಹೇಗೆ ಸಮಾಜ ದುರಂತದತ್ತ ಒಂದೊಂದೇ ಹೆಜ್ಜೆ ಇಟ್ಟು ಸಾಗುತ್ತದೆ ಎನ್ನುವುದನ್ನು ವಿವರವಾಗಿ ಬಿಡಿಸಿಟ್ಟಿದ್ದಾರೆ.
ರವಿ ಪಾಂಡವಪುರ ಉತ್ಸಾಹದ ಬುಗ್ಗೆ, ಟೆಲಿವಿಷನ್ ವರದಿಗಾರನಾಗಿ ಈತ ಪಾದರಸದಂತೆ ಎಲ್ಲೆಡೆ ಓಡಾಡುತ್ತಾ ಉತ್ತಮ ವರದಿಗಳನ್ನು ಕೊಟ್ಟದ್ದಷ್ಟೇ ಗೊತ್ತಿತ್ತು. ಮಾಧ್ಯಮ ಲೋಕವನ್ನು ಕನಸುಗಣ್ಣಿನಿಂದ ಪ್ರವೇಶಿಸುವ ಹತ್ತು ಹಲವಾರು ಮಂದಿ ಮಾಧ್ಯಮದ ಇನ್ನಿಲ್ಲದ ಒತ್ತಡ ಎದುರಿಸಲಾಗದೆ ಒಂದೋ ಮಾಧ್ಯಮ ಲೋಕದಿಂದ ದೂರ ಸರಿಯುತ್ತಾರೆ ಇಲ್ಲವೇ ಮಾಧ್ಯಮ ರಂಗದೊಳಗಿದ್ದೂ ಇಲ್ಲದಂತವರಾಗಿಬಿಡುತ್ತಾರೆ.
ಆದರೆ ರವಿ ಪಾಂಡವಪುರ ಅಂತಹವರಲ್ಲ. ಪತ್ರಿಕೆ, ಟೆಲಿವಿಷನ್ ಎರಡರಲ್ಲೂ ಇದ್ದೂ ಎಚ್ಚರದ ಕಣ್ಣನ್ನು ಹೊಂದಿದವರು. ಬರವಣಿಗೆಯ ಆಸಕ್ತಿಯನ್ನು ಉಸಿರುಗಟ್ಟುವ ಆವರಣದಲ್ಲಿದ್ದೂ ನೀರೆರೆದು ಪೋಷಿಸಿಕೊಂಡು ಬಂದವರು. ಇವರ ಆಸಕ್ತಿಗೆ ನಿಲುದಾಣಗಳಿವೆಯೇ ಹೊರತು ಕೊನೆಯಿಲ್ಲ ಎನ್ನುವುದಂತೂ ನಿಶ್ಚಿತ.
ರವಿ ಪಾಂಡವಪುರ ಅವರೊಳಗೆ ಸಮಾಜಮುಖಿ ದನಿ ಇದೆ. ಇವರು ಕೊಡಗಿನ ದುರಂತದ ಬಗ್ಗೆ ಬರೆದ ಕೃತಿಯಾಗಲೀ, ರೈತ ನಾಯಕ ಕೆ ಎಸ್ ಪುಟ್ಟಣ್ಣಯ್ಯ ಅವರ ಬಗ್ಗೆ ಬರೆದ ಕೃತಿ ಇದನ್ನು ಮನವರಿಕೆ ಮಾಡಿಕೊಡುತ್ತದೆ. ಈಗ ಒಂದೇ ಸಮಯದಲ್ಲಿ ಕನಗನಮರಡಿಯಲ್ಲಿ ಜರುಗಿದ ಬಸ್ ದುರಂತ ಹಾಗೂ ಸುಳ್ವಾಡಿಯ ದೇಗುಲದ ಪ್ರಸಾದ ದುರಂತದ ಬಗ್ಗೆ ಕೃತಿ ರಚನೆಗೆ ಮುಂದಾಗಿದ್ದಾರೆ.
ದುರಂತಗಳೇ ಏಕೆ ರವಿ ಪಾಂಡವಪುರ ಅವರನ್ನು ಕಾಡುತ್ತದೆ. ಈ ಪ್ರಶ್ನೆಯನ್ನು ನಾನು ಎದುರುಗೊಳ್ಳುವ ಮುನ್ನ ರವಿ ಅವರೇ ಅದನ್ನು ಕೇಳಿಕೊಂಡಿದ್ದಾರೆ. ನನಗೆ ರವಿ ಅವರ ಹೆಚ್ಚುಗಾರಿಕೆ ಕಾಣಿಸುವುದು ಇಲ್ಲಿಯೇ.
ದುರಂತ ಎನ್ನುವುದು ಮಾಧ್ಯಮಗಳಿಗೆ ಹಬ್ಬದೂಟವಿದ್ದಂತೆ. ಅದು ಎಂತಹ ದುರಂತವಾದರೂ ಸೈ. ಅದರ ಘೋರತೆ ಹೆಚ್ಚಾದಷ್ಟೂ ಸುದ್ದಿ ಮನೆಗೆ ಅವ್ಯಕ್ತ ಸಂಭ್ರಮ. ಇಂದಿನ ಟಿ ಆರ್ ಪಿ ಪ್ರೇರಿತ ಮಾಧ್ಯಮಗಳ ಕಾಲದಲ್ಲಿ ದುರಂತ ಎನ್ನುವುದು ನಾಲ್ಕಾರು ದಿನಗಳ ‘ಬೊಂಬಾಟ್ ಭೋಜನ’. ಸುದ್ದಿಮನೆಗೆ ಸಂವೇದನೆ ಕಡಿಮೆ. ಪ್ರತೀ ದಿನ ದುರಂತದ ಸುದ್ದಿ ಕೇಳುತ್ತಾ, ಅದರ ಎದುರು ನಿಂತು ಅದನ್ನು ವರದಿ ಮಾಡುತ್ತಾ ಇರುವ ಪತ್ರಕರ್ತರಿಗೆ ಕಂಡ ಹೆಣಗಳ ಸಂಖ್ಯೆ ಜಾಸ್ತಿಯಾದಷ್ಟೂ ಸಂವೇದನೆಯ ಸೂಚ್ಯಂಕ ಕುಸಿಯುತ್ತಾ ಹೋಗುತ್ತಿರುತ್ತದೆ.
ಇಂತಹ ಕಟು ವಾಸ್ತವದ ಕಾಲದಲ್ಲಿ ಒಬ್ಬ ಟೆಲಿವಿಷನ್ ವರದಿಗಾರನಾಗಿ ಸಾಕಷ್ಟು ದುರಂತಗಳ ವರದಿ ಮಾಡಿದ್ದರೂ ತನ್ನ ಸುದ್ದಿ ನಾಸಿಕವನ್ನು ಕಳೆದುಕೊಳ್ಳದ, ಎಚ್ಚರದ ಕಣ್ಣುಗಳು ಮಬ್ಬಾಗದಂತೆ ನೋಡಿಕೊಂಡ, ಬರವಣಿಗೆಯ ಹವ್ಯಾಸಕ್ಕೆ ತೆತ್ತುಕೊಂಡ, ಸುದ್ದಿಯ ಹಿಂದಿನ ಸುದ್ದಿಯನ್ನು ಬೆನ್ನತ್ತಿ ಹೋಗುವ ರವಿ ಪಾಂಡವಪುರ ಮುಖ್ಯವಾಗಿ ಕಾಣುತ್ತಾರೆ.
ಈ ಕೃತಿ ದೇವರ ರಾಜಕೀಯವನ್ನು ಬಿಂಬಿಸುತ್ತದೆ. ದೇವರ ವಾಣಿಜ್ಜೀಕರಿಸುವ ಹುನ್ನಾರ ಇಂದು ನಿನ್ನೆಯದಲ್ಲ. ರಾತ್ರೋರಾತ್ರಿ ಆಸ್ತಿ ಕಬಳಿಸುವ ಭಾಗವಾಗಿ, ಅನೇಕ ಅಭಿವೃದ್ಧಿ ಯೋಜನೆಗಳಿಗೆ ಸಂಕಷ್ಟ ತಂದಿಡುವ ಹುನ್ನಾರವಾಗಿ, ಜಾತಿ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿ ಮಾಡಲು ದೇವರು ಬಳಕೆಯಾಗಿದ್ದಾನೆ.
ಹಾಗೆ ಹೇಳುವಾಗ ‘ಪ್ರಜಾವಾಣಿ’ ದಶಕಗಳ ಹಿಂದೆ ಬೆಂಗಳೂರಿನ ಆದ್ಯಂತ ರಾತ್ರೋರಾತ್ರಿ ಸರ್ಕಾರಿ ಜಾಗಗಳಲ್ಲಿ, ಪಾರ್ಕ್ ಗಳಲ್ಲಿ ದೇವರುಗಳು ತಲೆ ಎತ್ತಿದ್ದರ ಬಗ್ಗೆ, ಜನನಿಬಿಡ ಸರ್ಕಲ್ ಗಳನ್ನು ಆಕ್ರಮಿಸಿಕೊಂಡ ಬಗ್ಗೆ ಮಾಡಿದ ಸರಣಿ ವರದಿಗಳು ನೆನಪಿಗೆ ಬರುತ್ತದೆ. ಜೊತೆಗೆ ಬಿ ವಿ ವೈಕುಂಠರಾಜು ಅವರ ‘ಉದ್ಭವ’ ನಾಟಕವೂ. ಬಾಳಿಗೊಂದು ನಂಬಿಕೆ ಬೇಕು ಎಂದು ಆ ಊರುಗೋಲನ್ನು ಅವಲಂಬಿಸಿದವರ ಸಂಖ್ಯೆ ಹೆಚ್ಚಾದದ್ದು ಗೊತ್ತಾಗಿದ್ದೇ ತಡ ದೇವರು ರಾತ್ರೋರಾತ್ರಿ ಎಲ್ಲೆಂದರಲ್ಲಿ ಉದ್ಭವವಾಗುವ ಮ್ಯಾಜಿಕ್ ಗಳು ಜರುಗಿದವು. ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಚ್ ಎನ್ ನಾಗಮೋಹನದಾಸ್ ಅವರು ಹೇಗೆ ಸರ್ಕಲ್ ಒಳಗೆ ದಿಢೀರನೇ ತಲೆ ಎತ್ತುವ ವಿಗ್ರಹ, ನಂತರ ಅದಕ್ಕೆ ಸಿಗುವ ಆಶ್ರಯ, ಆ ದೇವಸ್ಥಾನದ ಒತ್ತುವರಿ, ನಂತರ ಭವ್ಯ ಸಭಾಮಂಟಪ ಆ ಸರ್ಕಲ್ ನ್ನೇ ಒಂಬತ್ತು ಸುತ್ತು ಕಾರಿನಲ್ಲಿಯೇ ಸುತ್ತು ಹಾಕಿ ಪುಣ್ಯ ದಕ್ಕಿಸಿಕೊಳ್ಳುವವರ ಪ್ರಕರಣಗಳನ್ನು ನನ್ನೊಂದಿಗೆ ಹಂಚಿಕೊಂಡದ್ದೂ ನೆನಪಾಗುತ್ತಿದೆ.
ಇತ್ತೀಚಿಗೆ ಅಜ್ಮೀರ್ ದರ್ಗಾಕ್ಕೆ ನಾನು ಕಾಲಿಟ್ಟಾಗ ಇರುವೆಯೊಂದು ಕಾಲಿಡಲೂ ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು. ಅದರ ಮಧ್ಯೆಯೇ ಎಡತಾಕಿದ ಏಜೆಂಟರು ಕ್ಷಣ ಮಾತ್ರದಲ್ಲಿ ನನಗೆ ದರ್ಗಾದ ಹೃದಯ ಭಾಗಕ್ಕೆ ಕರೆದೊಯ್ದು ಬೇಕಾದ ಆಶೀವಾರ್ದವನ್ನೆಲ್ಲಾ ಕೊಡಿಸಿಬಿಟ್ಟಿದ್ದರು. ಸಂತನಿಗೂ ನನಗೂ ಮಧ್ಯೆ ಇದ್ದದ್ದು ಹಣದ ಕೊಂಡಿ. ಅಂಗವಸ್ತ್ರ, ಕರವಸ್ತ್ರ, ಲೋಬಾನ, ಕರ್ಪೂರ, ಗಂಧದ ಕಡ್ಡಿ ಹೀಗೆ ಅನೇಕ ಒಳಕೂಟವನ್ನೂ ನನ್ನ ಏಜೆಂಟ್ ನನ್ನ ಹಣದಿಂದ ಪೊರೆದಿದ್ದ.
ಇಂತಹ ಹಣವೇ ಮುಖ್ಯವಾಗಿರುವ ಭಕ್ತಿಯ ದಿನಗಳಲ್ಲಿ ಸುಳ್ವಾಡಿಯಲ್ಲಿ ಜರುಗಿದ ಪ್ರಸಾದ ದುರಂತವನ್ನು ರವಿ ಪಾಂಡವಪುರ ಸಾವಿರಾರು ಪುಟಗಳ ಪೊಲೀಸ್ ದಾಖಲೆ, ತಮ್ಮ ಕ್ಷೇತ್ರಕಾರ್ಯಗಳ ಮೂಲಕ ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ.
ಹಾಗೆ ಹೇಳುವಾಗ ಒಬ್ಬ ವರದಿಗಾರನಂತೆ ಅವರು ನಿರ್ಲಿಪ್ತರಾಗಿಲ್ಲ. ಅಥವಾ ವರದಿಗೆ ಆತ್ಮವೇ ಇಲ್ಲದಂತೆ ಮಾಡಿಲ್ಲ. ಬದಲಿಗೆ ಹೇಗೆ ಶ್ರದ್ಧೆಯ ಕೇಂದ್ರಗಳು ಹಣದ ಕೂಪಗಳಾಗಿವೆ ಎಂಬುದನ್ನು ಬಿಡಿಸಿಟ್ಟಿದ್ದಾರೆ. ಹಣ ಮತ್ತು ದೇಗುಲದ ನಡುವಿನ ಕೊಂಡಿ ಹೇಗಿರುತ್ತದೆ ಎನ್ನುವುದನ್ನು ವಿವರಿಸಿ ಹೇಳಿದ್ದಾರೆ.
ಕವಿ ಸಿದ್ದಲಿಂಗಯ್ಯನವರ ‘ಅವತಾರಗಳು’ ಅವರ ಪಿಎಚ್ ಡಿ ಅಧ್ಯಯನದ ಫಲವಾಗಿ ಹೊಮ್ಮಿದ ಒಂದು ಭಾಗ. ಗ್ರಾಮದೇವತೆಗಳ ಅಧ್ಯಯನ ನಡೆಸಿದ ಸಿದ್ದಲಿಂಗಯ್ಯನವರು ‘ಅವತಾರಗಳು’ ಬರೆಯಲು ಕಾರಣವಿತ್ತು. ಅವರು ಕ್ಷೇತ್ರ ಕಾರ್ಯ ಮಾಡುವಾಗ ಹೇಗೆ ಜಾತಿ ವ್ಯವಸ್ಥೆಯನ್ನು ಇನ್ನಷ್ಟು ಬಿಗಿ ಮಾಡಲು, ಶೋಷಣೆ ನಿರಂತರವಾಗಿ ಉಳಿಯಲು ದೇವರನ್ನು ಬಳಸುತ್ತಾರೆ ಎನ್ನುವುದನ್ನು ಕಂಡುಕೊಂಡಿದ್ದರು. ಇದು ಜಾಗತೀಕರಣದ ಕಾಲ. ಹಣ ಎನ್ನುವುದು ಪ್ರಧಾನವಾದ ಜಾಗತೀಕರಣ. ಶ್ರದ್ಧೆ, ಭಕ್ತಿಯ ಕೇಂದ್ರಗಳನ್ನೂ ಒಂದೇ ಹೊಡೆತಕ್ಕೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದೇ ಜಾಗತೀಕರಣ, ಸಮಾಜ ಮುಖ್ಯವಾಗಿದ್ದ ದಿನಗಳನ್ನು ತೊಡೆದು ಹಾಕಿ ವ್ಯಕ್ತಿ ಪ್ರಧಾನ ಲೋಕವನ್ನು ಸೃಷ್ಟಿಸುತ್ತಿದೆ. ತಾನೊಬ್ಬ ಮುಖ್ಯ ಎನ್ನುವ ಈ ಜಾಗತೀಕರಣವೇ ನ್ಯಾಯ- ಅನ್ಯಾಯ, ಪಾಪ-೦ ಪುಣ್ಯ ಎನ್ನುವ ಪ್ರಜ್ಞೆಯನ್ನು ನುಚ್ಚುನೂರು ಮಾಡಿದೆ. ರವಿ ಪಾಂಡವಪುರ ಅವರ ‘ಅಯ್ಯೋ ದ್ಯಾವ್ರೇ’ ಗುರುತಿಸುತ್ತಿರುವುದು ಇದನ್ನೇ.. ಒಬ್ಬನ ಲಾಲಸೆ ಹೇಗೆ ಎಲ್ಲಾ ನೈತಿಕತೆಯ ಚೌಕಟ್ಟನ್ನೂ ಮೀರಿ ದುರಂತದ ಬಾಗಿಲು ತೆರೆಯುತ್ತದೆ ಎಂದು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.
ಹೀಗೆಲ್ಲಾ ಅಂದುಕೊಳ್ಳುತ್ತಿರುವಾಗಲೇ ನನಗೆ ‘ಇಂಡಿಯನ್ ಎಕ್ಸ್ ಪ್ರೆಸ್’ ಬಳಗ ಹೊರತಂದ ‘187 LIVES’ ಎನ್ನುವ ಪುಸ್ತಕ ಇನ್ನಿಲ್ಲದಂತೆ ನೆನಪಾಗುತ್ತಿದೆ. ಮುಂಬೈನಲ್ಲಿ ಭಯೋತ್ಪಾದಕರ ಕರಾಳ ಕೃತ್ಯಕ್ಕೆ ಬಲಿಯಾದ ಜೀವಗಳು 187. ಮುಂಬೈನ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟಿಸಿದಾಗ 187 ಅಮಾಯಕ ಜೀವಗಳು ಪ್ರಾಣ ಕಳೆದುಕೊಂಡವು. ಅವರ ಸಾವಿನ ನಂತರ ಅವರ ಮನೆಗಳ ಬಾಗಿಲು ತಟ್ಟಿದ ಇಂಡಿಯನ್ ಎಕ್ಸ್ ಪ್ರೆಸ್ ಆ ದುರಂತ, ಆ ಖಾಲಿತನ, ಆ ನೋವಿನ ಜೊತೆಗೆ ಇಡೀ ಕುಟುಂಬ ಹೋರಾಡುತ್ತಿರುವುದನ್ನು ಬಿಡಿಸಿ ಹೇಳಿತ್ತು.
ರವಿ ಪಾಂಡವಪುರ ಅವರ ಕೃತಿಯಲ್ಲೂ ಎರಡನೆಯ ಭಾಗ ಎನ್ನಬಹುದಾದ ಪುಟಗಳಲ್ಲಿ ಸಾವಿಗೀಡಾದವರ ದುರಂತ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರ ಕೃತಿಯ ಕ್ಯಾನ್ ವಾಸ್ ನಲ್ಲಿ ರೋಚಕತೆಯ ಗುಣವಿದೆ. ಇದು ಈ ಕೃತಿಗೆ ವರವೂ ಹೌದು, ಮಿತಿಯೂ ಹೌದು. ರೋಚಕತೆಯ ಕಾರಣದಿಂದಾಗಿ ಈ ಕೃತಿ ಒಂದೇ ಏಟಿಗೆ ಓದಿಸಿಕೊಳ್ಳುತ್ತದೆ. ಆ ಮೂಲಕ ಒಂದು ದುರಂತವನ್ನು ಸಮರ್ಥವಾಗಿ ದಾಟಿಸುತ್ತದೆ. ಆದರೆ ಅದೇ ರೋಚಕತೆಯಿಂದಾಗಿ ಟ್ಯಾಬ್ಲಾಯ್ಡ್ ಗಳ, ಟಿ ಆರ್ ಪಿ ಟಿವಿಗಳ ಅಬ್ಬರದ ದನಿ ಬಂದುಬಿಟ್ಟಿದೆ. ನ್ಯಾಯ ತೀರ್ಮಾನವನ್ನೂ ಮಾಡಿಬಿಡುತ್ತದೆ.
ಪೊಲೀಸರ ಎಫ್ ಐ ಆರ್ ಗಳ ಆಚೆಗೂ ಸತ್ಯವಿರುತ್ತದೆ. ಎಫ್ ಐ ಆರ್ ಗಳು ರೂಪುಗೊಳ್ಳುವುದು ಹಿಂದೆಯೂ ಹಲವು ಚದುರಂಗದಾಟವಿರುತ್ತದೆ ಎಂದು ರವಿಗೆ ಗೊತ್ತಿಲ್ಲದೇನೂ ಅಲ್ಲ. ಆದರೆ ಈ ಕೃತಿಯಲ್ಲಿ ಅದಕ್ಕೆ ಅವಕಾಶ ಸಿಕ್ಕಿಲ್ಲ. 187 LIVES ಕೃತಿಯನ್ನು ನಾನು ಉದಾಹರಿಸಿದುದರ ಉದ್ದೇಶವೂ ಅಷ್ಟೇ ಒಂದು ದುರಂತವನ್ನು ಹಿಡಿದಿಡುವಾಗಲೂ ಅನೇಕ ದಾರಿಗಳಿವೆ. ಎಲ್ಲಾ ದಾರಿಗಳೂ ಒಂದೇ ದುರಂತದತ್ತ ಕೊಂಡೊಯ್ದರೂ ಆ ದಾರಿ ತುಳಿಯುವಾಗ ಗೋಚರಿಸುವ ಸತ್ಯಗಳು, ಆಗುವ ಅನುಭವಗಳು ಬೇರೆ. ಅಂತಹ ಬರಹಗಳನ್ನು ಕಡೆದಿಡುವ ಶಕ್ತಿ ರವಿಗಿದೆ. ಅವರ ಬರಹಗಳು ತಮ್ಮೆಲ್ಲಾ ಮಿತಿಗಳ ಮಧ್ಯೆಯೂ ಮಾಧ್ಯಮ ಲೋಕದಲ್ಲಿ ಒಂದು ಕಂದೀಲು ಎನ್ನುವುದು ಅರಿವು ನನಗಿದೆ.